ಇಂದು ಸೂರ್ಯ ಯಾವ ದಿಕ್ಕಿಗೆ ಉದಯಿಸಿದ್ದಾರೆ ?
ಪ್ರಶ್ನೆ : ಇಂದು ಹುಣ್ಣಿಮೆ. ಸೂರ್ಯ ದೇವರು ಇಂದು ಯಾವ ದಿಕ್ಕಿಗೆ ಉದಯಿಸಿದ್ದಾರೆ ? ಯಾವ ದಿಕ್ಕಿಗೆ ಅಸ್ತಂಗತರಾಗುತ್ತಾರೆ (ಮುಳುಗುತ್ತಾರೆ)?
.
.
.
.
.
.
.
ಈ ಪ್ರಶ್ನೆಗೆ ಸರಿಯಾದ ಉತ್ತರಕ್ಕಾಗಿ ಗುರುವಿನ ಅವಶ್ಯಕತೆ ಇದೆ. ಹಲವರು ಯೋಚಿಸಬಹುದು ಇದಕ್ಕೆ ಯಾಕೆ ಗುರು ಬೇಕು ?
ಚಿಕ್ಕ ಮಕ್ಕಳು ಸಹ ಸೂರ್ಯ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುತ್ತಾನೆ, ಎಂದು ಈ ಪ್ರಶ್ನೆಗೆ ಉತ್ತರಿಸುತ್ತಾರೆ.
ಆದರೆ ಇಲ್ಲಿಯೇ ಅಜ್ಞಾನ ಇದೆ. ಈ ಅಜ್ಞಾನದ ನಿವಾರಣೆಗಾಗಿಯೇ ಗುರುವಿನ ಅವಶ್ಯಕತೆ ಇದೆ.
ಒಂದು ಉದಾಹರಣೆ ನೋಡೋಣ. ನಾಲ್ಕೈದು ಕುರುಡರು ಆನೆ ಹೇಗಿದೆ ? ಎಂದು ಕಂಡುಕೊಳ್ಳಲು ಹೋದರು.
* ಬಾಲವನ್ನು ಹಿಡಿದಂತಹ ಕುರುಡ ವ್ಯಕ್ತಿ, ಆನೆಯೆಂದರೆ ಉದ್ದಕ್ಕೆ ತೆಳ್ಳಗೆ ಇದೆ, ಎನ್ನುತ್ತಾನೆ.
* ಸೊಂಡಿಲು ಹಿಡಿದಂತಹ ಕುರುಡ ವ್ಯಕ್ತಿ ಆನೆಯೆಂದರೆ ಉದ್ದಕ್ಕೆ ಕೊಳಾಯಿಯಂತೆ ಇದೆ ಎನ್ನುತ್ತಾನೆ.
* ಕಾಲುಗಳನ್ನು ಹಿಡಿದ ಕುರುಡ ವ್ಯಕ್ತಿ ಆನೆಯೆಂದರೆ ಕಂಬದಂತೆ ಇದೆ, ಎನ್ನುತ್ತಾನೆ.
* ಹೊಟ್ಟೆಯನ್ನು ಹಿಡಿದ ಕುರುಡ ವ್ಯಕ್ತಿ ಆನೆಯೆಂದರೆ ಸಣ್ಣ ಪರ್ವತದಂತೆ ಇದೆ, ಎನ್ನುತ್ತಾನೆ.
ಇವೆಲ್ಲಾ ಕುರುಡು ವ್ಯಕ್ತಿಗಳ ಪಾಲಿಗೆ ಸತ್ಯವೇ. ಆದರೆ ಕಣ್ಣಿರುವವರಿಗೆ ಇವು ಪೂರ್ಣ ಸತ್ಯವಲ್ಲ. ಕೇವಲ ಭಾಗಶಃ ಸತ್ಯ.
ಈ ಜಗತ್ತಿನಲ್ಲಿ ಭಾಗಶಃ ಸತ್ಯ ಅರಿತಿರುವ ನಾವೆಲ್ಲರೂ ಆ ಕುರುಡರೇ. ಅದಕ್ಕಾಗಿಯೇ ಪೂರ್ಣ ಸತ್ಯ ಅರಿತಿರುವ ಗುರುವಿನ ಅವಶ್ಯಕತೆ ನಮಗೆ ಇದೆ.
ಮೇಲಿನ ಪ್ರಶ್ನೆಯನ್ನು ತಾವು ಓದಿದ ನಂತರ, ಬಹುತೇಕ ಎಲ್ಲರೂ ತಮ್ಮ ತಮ್ಮ ಮನಸ್ಸಿನಲ್ಲಿ ಭಾಗಶಃ ಸತ್ಯದ ಉತ್ತರವನ್ನೇ ಹೇಳಿಕೊಂಡಿದ್ದೀರಿ.
ಆದರೆ, ಪೂರ್ಣ ಸತ್ಯವೆಂದರೆ ಸೂರ್ಯ ದೇವರು ಇಂದು ಯಾವ ದಿಕ್ಕಿಗೂ ಉದಯಿಸಿಲ್ಲ. ಯಾವ ದಿಕ್ಕಿಗೂ ಮುಳುಗುವುದಿಲ್ಲ. ಸೂರ್ಯ ದೇವರು ತಮ್ಮ ಸ್ಥಳದಲ್ಲಿಯೇ ಇದ್ದಾರೆ. ಆದರೆ ಸೌರವ್ಯೂಹದಲ್ಲಿರುವ ಭೂ ಮಾತೆಯೇ ತನ್ನ ಕಕ್ಷೆಯ ಸುತ್ತಲೂ ಸುತ್ತುತ್ತಿದ್ದಾರೆ. ಹಾಗಾಗಿ ಭೂಮಿಯ ಒಂದು ಭಾಗದ ಜನರಿಗೆ ಹಗಲಿದೆ. ಇನ್ನೊಂದು ಭಾಗದ ಜನರಿಗೆ ರಾತ್ರಿ ಇದೆ.
ಹೀಗೆ ನಾವೆಲ್ಲರೂ ಜೀವನದ ಬಗ್ಗೆ ಇನ್ನೂ ಅನೇಕ "ಭಾಗಶಃ ಸತ್ಯ"ದ ತಿಳುವಳಿಕೆಯನ್ನೆ ಹೊಂದಿದ್ದೇವೆ. ನಮಗೆ ಪೂರ್ಣ ಸತ್ಯದ ಅರಿವಾಗಲು, ಪೂರ್ಣ ಸತ್ಯದಲ್ಲಿ ನೆಲೆ ನಿಲ್ಲಲು ಗುರುವಿನ ಅವಶ್ಯಕತೆ ಇದೆ.
ಪೂರ್ಣ ಸತ್ಯ ಕೇವಲ ಗುರುವಿನಲ್ಲಿ ಇದೆ. ನಮ್ಮಲ್ಲಿ ಇಲ್ಲ, ಎಂದಲ್ಲ. ಪೂರ್ಣ ಸತ್ಯ ನಮ್ಮೆಲ್ಲರಲ್ಲಿಯೂ ಇದೆ.
ಆದರೆ "ನಾನು" ಎನ್ನುವ ಒಂದು ಅಜ್ಞಾನದ ಪೊರೆ (ಪದರು) ಆ ಪೂರ್ಣ ಸತ್ಯವನ್ನು ಮುಚ್ಚಿದೆ.
ಗುರುವಿನ ಸಾನ್ನಿಧ್ಯ ಪಡೆಯಲು ಅಡ್ಡವಾಗಿರುವುದು ಸಹ ಈ "ನಾನು" ಎನ್ನುವ ಪೊರೆಯೇ (ಪದರೆ).
"ನಾನು" ಎನ್ನುವ ಪೊರೆಯನ್ನು ಗುರುವಿಗೆ ಅರ್ಪಿಸಿದಾಗ, ನಮ್ಮಲ್ಲೇ ಇರುವ ಪೂರ್ಣ ಸತ್ಯ ನಮಗೆ ಗೋಚರಿಸಲು ಆರಂಭವಾಗುತ್ತದೆ.
ನಾವು ಸೂರ್ಯ ದೇವರು ಹುಟ್ಟುತ್ತಾರೆ, ಮುಳುಗುತ್ತಾರೆ, ಎಂದು ಹೇಳಲು ಮುಖ್ಯ ಕಾರಣ ತನ್ನ ಅರಿವಿನ ಜಗತ್ತಿಗೆ ಸಂಬಂಧಿಸಿದಂತೆ, ನಮ್ಮ ಕಣ್ಣು ಕತ್ತಲಿನಿಂದ ಬೆಳಕಿನ ಅನುಭವಕ್ಕೆ ಹೋಗುವುದು.
ಹೊರಗಿನ ಕಣ್ಣು ಕತ್ತಲಿನಿಂದ, ಬೆಳಕಿಗೆ ಹೋದಂತೆ, ಇಂದಿನ ಗುರುಪೂರ್ಣಿಮೆಯೂ ತಮ್ಮ ಒಳಗಿನ ಜ್ಞಾನದ ಕಣ್ಣನ್ನು ಸಹ ಕತ್ತಲಿನಿಂದ ಬೆಳಕಿನ ಕಡೆಗೆ ಹೊರಳುವಂತೆ ಮಾಡುವಂತಾಗಲಿ.
ತಮ್ಮೆಲ್ಲರ ಅಂತರಂಗದಲ್ಲಿಯೂ ಜ್ಞಾನದ ಸೂರ್ಯೋದಯವಾಗಲಿ.
ಈ ಗುರು ಪೂರ್ಣಿಮೆ ತಮ್ಮ ಅಂತರಂಗದಲ್ಲಿ ಪೂರ್ಣ ಸತ್ಯದ ಜ್ಞಾನಸೂರ್ಯ ಉದಯದ ದಿನವಾಗಲಿ ಎಂದು ಶುಭ ಹಾರೈಸುತ್ತೇನೆ.
ಎಲ್ಲರ ಅಂತರಂಗದಲ್ಲಿ ಅಂತಹ ಸತ್ಯ ಯುಗದ ಸಮಯ ಬಹುಬೇಗ ಬರಲಿ. ತಾವು ಸಹ ತಮ್ಮ ಪೊರೆಯನ್ನು ಗುರುವಿಗೆ ಅರ್ಪಿಸಿ ತಮ್ಮಲ್ಲಿಯೇ ಇರುವ ಪೂರ್ಣ ಸತ್ಯವನ್ನು ಕಂಡುಕೊಳ್ಳುವಂತಾಗಲಿ ಎಂದು ಆಶಿಸುತ್ತಾ...
ಜಗತ್ತಿನಲ್ಲಿ ಸತ್ಯ ಯುಗ ಪುನಃ ಸ್ಥಾಪನೆಯಾಗಲಿ ಎಂದು ಬಯಸುತ್ತಾ...
ತಮ್ಮೆಲ್ಲರಿಗೂ ಗುರು ಪೂರ್ಣಿಮೆಯ ಹಾರ್ಧಿಕ ಶುಭಾಶಯಗಳನ್ನು ತಿಳಿಸುತ್ತೇನೆ.
ಎಲ್ಲರಿಗೂ ಒಳ್ಳೆಯದಾಗಲಿ.
ಓಂ ನಮಃ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ.
ಈ ಪದ ಯುಗ ಪರಿವರ್ತನೆಗೆ ನಾಂದಿ.
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ)
21/07/2024
ಗುರುಪೂರ್ಣಿಮೆ
.jpeg)
Comments
Post a Comment